ಚಿತ್ರದುರ್ಗ
ಜಿಲ್ಲಾ ನೀರಾವರಿ ಅನುಷ್ಟಾನ ಹೋರಾಟ ಸಮಿತಿ ವತಿಯಿಂದ ಭರ್ತಿಯಾಗಿರುವ ಭದ್ರಾ ಜಲಾಶಯಕ್ಕೆ ಬಯಲು ಸೀಮೆ ಬಾಗಿನ ಸಮರ್ಪಣೆ ಮಾಡುವ ಕಾರ್ಯವನ್ನು ಆಗಸ್ಟ್ 3 ರ ಭಾನುವಾರ ಹಮ್ಮಿಕೊಳ್ಳಲಾಗಿದೆ.
ಎಂದಿನಂತೆ ಈ ಬಾರಿಯೂ ಬಾಗಿನವನ್ನು ವಿಶೇಷವಾಗಿ ಸಜ್ಜುಗೊಳಿಸಲಾಗಿದೆ. ಜಿಲ್ಲೆಯಲ್ಲಿ ಬೆಳೆಯುವ 30 ಕ್ಕೂ ಹೆಚ್ಚು ಧಾನ್ಯಗಳನ್ನುತೊಟ್ಟಿಲು ಆಕಾರದ ಮೊರದಲ್ಲಿ ಇಟ್ಟು ಜಲಾಶಯದಲ್ಲಿನ ಜಲಚರಕ್ಕೆ ಅರ್ಪಿಸಲಾಗುತ್ತಿದೆ. ರಾಗಿ, ಜೋಳ, ಸೂರ್ಯಕಾಂತಿ, ಮೆಕ್ಕೇಜೋಳ, ಕುರಸಾನಿ, ಕುಸುಬೆ, ಹಲಸಂದಿ, ತೊಗರಿ, ಎಳ್ಳು, ಹೆಸರುಕಾಲು, ಸಾಸಿವೆ, ಸಿರಿದಾನ್ಯ ಸೇರಿದಂತೆ ದಾಳಿಂಬೆ, ಮೋಸುಂಬಿ, ಬಾಳೆಹಣ್ಣು, ಮುಂತಾದ ಹಣ್ಣು ಹಂಪಲು, ಪ್ರಮುಖ ತರಕಾರಿಯ ತೊಟ್ಟಿಲಲ್ಲಿ ತುಂಬಿ ಜಲಾಶಯಕ್ಕೆ ಸಮರ್ಪಣೆ ಮಾಡಲಾಗುವುದು.
ಈ ಬಾರಿ ಹೊಳಲ್ಕೆರೆ ತಾಲೂಕಿನ ಕೆರೆಗಳಿಗೆ ನೀರು ಬರುವ ಹಿನ್ನಲೆಯಲ್ಲಿ ವಿಶೇಷವಾಗಿ ಹೊಳಲ್ಕೆರೆ ತಾಲೂಕಿನ ರೈತರನ್ನುಹೆಚ್ಚಿನ ಪ್ರಮಾಣದಲ್ಲಿ ಬಾಗಿನ ಸಮರ್ಪಣೆ ಕಾರ್ಯಕ್ರಮಕ್ಕೆ ಕರೆದೊಯ್ಯಲಾಗುತ್ತಿದೆ. ಒಂದು ನೂರಕ್ಕೂ ಹೆಚ್ಚು ಕಾರುಗಳಲ್ಲಿ ಜನತೆ ತೆರಳುವರು. ಶಾಸಕ ಎಂ.ಚಂದ್ರಪ್ಪ ಜವಾಬ್ದಾರಿ ಹೊತ್ತಿದ್ದಾರೆ.
ಅಬ್ಬಿನಹೊಳಲು, ಅಜ್ಜಂಪುರ ಸಮೀಪದ ಸುರಂಗ ಮಾರ್ಗ, ಬೆಟ್ಟದಾವರೆಕೆರೆ ಲಿಫ್ಟ್ , ಶಾಂತಿಪುರ ಲಿಪ್ಟ್ ವೀಕ್ಷಣೆ ಮಾಡಿಕೊಂಡು ಅಂತಿಮವಾಗಿ ಲಕ್ಕವಳ್ಳಿ ಭದ್ರಾ ಜಲಾಶಯಕ್ಕೆ ತೆರಳಿ ಬಾಗಿನ ಸಮರ್ಪಣೆ ಮಾಡಲಾಗುವುದು ಎಂದು ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ತಿಳಿಸಿದ್ದಾರೆ.
