ಟಿ.ರಘುಮೂರ್ತಿ ಯುವ ಸೇನೆ ಲೋಗೋ ಬಿಡುಗಡೆ
ವರದಿ:- ಅರುಣ್ ಕುಮಾರ್. ಎಸ್. (ದೊಡ್ಡ ಉಳ್ಳಾರ್ತಿ)
Thank you for reading this post, don't forget to subscribe!ಚಿತ್ರದುರ್ಗ, ಜೂನ್. 11 : ಸಮಾಜ ಮುಖಿ ಕೆಲಸಗಳು ಎಲ್ಲಿರುತ್ತೋ ಅಲ್ಲಿ ಖಂಡಿತ ಜಯ ಸಿಕ್ಕೆ ಸಿಗುತ್ತದೆ. ಹಾಗಾಗಿ ನಾನು ಮೂರನೆ ಬಾರಿಗೆ ಚಳ್ಳಕೆರೆ ಶಾಸಕನಾಗಿ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತಿದ್ದೇನೆಂದು ಶಾಸಕ ಟಿ.ರಘುಮೂರ್ತಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ತಮ್ಮ 63 ನೇ ಜನ್ಮದಿನದ ಅಂಗವಾಗಿ ಬುಧವಾರ ಒನಕೆ ಓಬವ್ವ ವೃತ್ತದಲ್ಲಿ ಟಿ.ರಘುಮೂರ್ತಿ ಯುವ ಸೇನೆ, ಭೂಮಿ ಗೀತಾ ಪ್ರಾಪರ್ಟಿಸ್, ಅಹೋಬಲ ಟಿ.ವಿ.ಎಸ್. ಹಾಗೂ ಕರುನಾಡ ವಿಜಯಸೇನೆಯಿಂದ ಅದ್ದೂರಿಯಾಗಿ ಸನ್ಮಾನ ಸ್ವೀಕರಿಸಿ ನಂತರ ಟಿ.ರಘುಮೂರ್ತಿ ಯುವ ಸೇನೆ ಲೋಗೋ ಬಿಡುಗಡೆಗೊಳಿಸಿ ಮಾತನಾಡಿದ ಶಾಸಕ ಟಿ.ರಘುಮೂರ್ತಿರವರು ನಿಮ್ಮಗಳ ಪ್ರೀತಿ, ಅಭಿಮಾನಕ್ಕೆ ಅಬಾರಿಯಾಗಿದ್ದೇನೆ. ಕಳೆದ ಹದಿಮೂರು ವರ್ಷಗಳಿಂದಲೂ ಕ್ಷೇತ್ರ ಸೇರಿದಂತೆ ಜಿಲ್ಲೆಯ ಅಭಿವೃದ್ದಿ ವಿಚಾರದಲ್ಲಿ ಯಾರ ಮನಸ್ಸಿಗೂ ನೋವಾಗದಂತೆ ನಡೆದುಕೊಂಡು ಜನ ಸೇವೆಯಲ್ಲಿ ಮುಂದುವರೆಯುತ್ತಿದ್ದೇನೆ. ಪ್ರತಿಯೊಬ್ಬರ ಏಳಿಗೆ ಬಯಸುವುದು ನಮ್ಮ ಉದ್ದೇಶ ಎಂದು ಹೇಳಿದರು.
ಮಧ್ಯ ಕರ್ನಾಟಕದ ಬಯಲುಸೀಮೆ ಚಿತ್ರದುರ್ಗ ಜಿಲ್ಲೆಗೆ ಭದ್ರಾ ಮೇಲ್ದಂಡೆ ಯೋಜನೆಯಿಂದ ನೀರು ಹರಿಸುವುದಕ್ಕಾಗಿ ಜಿಲ್ಲೆಯ ಎಲ್ಲಾ ಶಾಸಕರುಗಳು ಪಕ್ಷಾತೀತವಾಗಿ ಸಾಕಷ್ಟು ಹೋರಾಟಗಳನ್ನು ಮಾಡಿಕೊಂಡು ಬರುತ್ತಿದ್ದೇವೆ. ನೀರು ಹರಿಯುವ ಕಾಲ ಸನಿಹದಲ್ಲಿದೆ. ಜಾತಿವಾರು ಹಾಗೂ ಅಭಿವೃದ್ದಿಯ ಆಧಾರದ ಮೇಲೆ ರಾಜ್ಯದ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಚಿವ ಸಂಪುಟದಲ್ಲಿ ನನಗೆ ಮಂತ್ರಿ ಸ್ಥಾನ ಸಿಗುತ್ತದೆಂಬ ಭರವಸೆಯಿದೆ. ಒಂದು ವೇಳೆ ಸಿಗದಿದ್ದರೂ ನಿರಾಸೆಯಾಗಲ್ಲ. ಶಾಸಕನಾಗಿ ಅಭಿವೃದ್ದಿ ಕೆಲಸಗಳನ್ನು ಕೈಗೊಳ್ಳುತ್ತೇನೆ. ಅನೇಕ ಸಂಘಟನೆಗಳ ಮೂಲಕ ಮೊದಲಿನಿಂದಲೂ ಸಮಾಜಮುಖಿ ಕೆಲಸದ ಮೂಲಕ ಹೋರಾಟ ಮಾಡಿಕೊಂಡು ಬರುತ್ತಿರುವ ಕೆ.ಟಿ.ಶಿವಕುಮಾರ್ ನೂತನವಾಗಿ ಸ್ಥಾಪಿಸಿರುವ ಟಿ.ರಘುಮೂರ್ತಿ ಯುವ ಸೇನೆ ರಾಜ್ಯಾದ್ಯಂತ ವಿಸ್ತರಿಸಲಿ ಎಂದು ಶುಭ ಹಾರೈಸಿದರು.
ಟಿ.ರಘುಮೂರ್ತಿ ಯುವ ಸೇನೆ ರಾಜ್ಯಾಧ್ಯಕ್ಷ ಕೆ.ಟಿ.ಶಿವಕುಮಾರ್ ಮಾತನಾಡಿ ರಾಜ್ಯದ 224 ಕ್ಷೇತ್ರಗಳ ಪೈಕಿ ಅಭಿವೃದ್ದಿ ವಿಚಾರದಲ್ಲಿ ಅಪರೂಪದ ಶಾಸಕರೆನಿಸಿಕೊಂಡಿರುವ ಟಿ.ರಘುಮೂರ್ತಿರವರು ಮೂರನೆ ಬಾರಿಗೆ ಚಳ್ಳಕೆರೆ ಶಾಸಕರಾಗಿ ಹ್ಯಾಟ್ರಿಕ್ ಹೀರೋ ಆಗಿ ಹೊರಹೊಮ್ಮಿದ್ದಾರೆ. ನಾನೊಬ್ಬ ಬೆಳಗಟ್ಟದ ಮತದಾರನಾಗಿ ಹಿಂದಿನಿಂದಲೂ ಟಿ.ರಘುಮೂರ್ತಿರವರ ಅಭಿಮಾನಿಯಾಗಿದ್ದೇನೆ. ಶಿಕ್ಷಣ, ಆರೋಗ್ಯ ಹಾಗೂ ಮೂಲಭೂತ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಜನಸಾಮಾನ್ಯರ ಕುಂದು ಕೊರತೆ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತೇನೆಂದರು.
ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ.ರಘು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಬುರೆಡ್ಡಿ, ಅಹೋಬಲ ಟಿ.ವಿ.ಎಸ್.ನ ಅರುಣ್, ಬೀರಾವರ ಪ್ರಕಾಶ್ ಸೇರಿದಂತೆ ಅಪಾರ ಅಭಿಮಾನಿಗಳು ಈ ಸಂದರ್ಭದಲ್ಲಿ ಹಾಜರಿದ್ದು, ಶಾಸಕ ಟಿ.ರಘುಮೂರ್ತಿರವರಿಗೆ ಹುಟ್ಟುಹಬ್ಬದ ಶುಭಾಷಯಗಳನ್ನು ಕೋರಿದರು.
ಜನ್ಮದಿನದ ಅಂಗವಾಗಿ ಏರ್ಪಡಿಸಲಾಗಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ 44 ಮಂದಿ ರಕ್ತದಾನ ಮಾಡಿದರು.











